ಪಟ್ಟೆ ಬಡಗನ್ನೂರು: “ ಶ್ರೀರಾಮಚಂದ್ರರ ಆದರ್ಶ ಗುಣಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಿ” ಎಂದು ವಿದ್ಯಾರ್ಥಿಗಳಿಗೆ ಶ್ರೀ ಗಣರಾಜ ಕುಂಬ್ಳೆಯವರು ಕರೆ ನೀಡಿದರು.
ಅವರು ಪಟ್ಟೆ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳಲ್ಲಿ ನಡೆದ ರಾಮ ನವಮಿ ದಿನಾಚರಣೆ ಹಾಗೂ ದಿನಾಂಕ 27/03/2026 ರಿಂದ 31/03/2026 ರವರೆಗೆ ನಡೆಯುವ ಆಕಾಶಕ್ಕೆ ಏಣಿ ಎಂಬ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ, ಬೇಸಿಗೆ ಶಿಬಿರದಲ್ಲಿ ವಿದ್ಯಾರ್ಥಿಗಳು ತಮ್ಮ ಅರಿವು ಮತ್ತು ಕೌಶಲಗಳನ್ನು ಹೆಚ್ಚಿಸಿಕೊಳ್ಳಬೇಕೆಂದು ತಿಳಿಸಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಸಂಸ್ಥೆಯ ಸಂಚಾಲಕರಾದ ಶ್ರೀ ವಿಘ್ನೇಶ್ ಹಿರಣ್ಯರವರು ಶಿಕ್ಷಣವು ಕೇವಲ ಪಠ್ಯ ಬೋಧನೆಗೆ ಮಾತ್ರವಲ್ಲ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಶಿಬಿರವು ಪೂರಕವಾಗಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರತಿಭಾ ಪ್ರೌಢಶಾಲೆಯ SDMC ಅಧ್ಯಕ್ಷರಾದ ಶ್ರೀಯುತ ಲಿಂಗಪ್ಪಗೌಡ ಮೋಡಿಕೆ, ಶ್ರೀ ಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯ SDMC ಅಧ್ಯಕ್ಷರಾದ ಶ್ರೀ ಕೇಶವಪ್ರಸಾದ್ ನೀಲಗಿರಿ, ಪ್ರೌಢಶಾಲಾ ಮುಖ್ಯ ಗುರುಗಳಾದ ಶ್ರೀಮತಿ ಸುಮನಾ ಬಿ ಮಾತಾಜಿರವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕರ್ನಾಟಕ ಪರೀಕ್ಷಾ ಮಂಡಳಿಯಿಂದ ನಡೆಸಲ್ಪಟ್ಟ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. 9 ನೇ ತರಗತಿಯ ಆದಿತ್ಯ ಕೃಷ್ಣ ಸ್ವಾಗತಿಸಿ, 9 ನೇ ತರಗತಿಯ ಜೀವಿತಾ ಹೆಚ್ ಧನ್ಯವಾದವನ್ನಿತ್ತರು. 9 ನೇ ತರಗತಿಯ ವಿಸ್ಮಿತಾ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಎಲ್ಲಾ ಶಿಕ್ಷಕವೃಂದದವರು ಉಪಸ್ಥಿತರಿದ್ದರು.
ಆಕಾಶಕ್ಕೆ ಏಣಿ ಬೇಸಿಗೆ ಶಿಬಿರದ ಮೊದಲ ದಿನ ವಿದ್ಯಾರ್ಥಿಗಳಿಂದ ಚಿಂತನೆ ಮತ್ತು ಶಿಬಿರ ಗೀತೆಯನ್ನು ಹಾಡಿಸಲಾಯಿತು. ಐದು ದಿನದ ಶಿಬಿರದಲ್ಲಿ ಸಾಮಾನ್ಯ ಜ್ಞಾನ, ಹಸ್ತಾಕ್ಷರ,ಯಕ್ಷಗಾನ ಮುಖ ವರ್ಣಿಕೆ, ನಾಯಕತ್ವ,ಕ್ರಾಫ್ಟ್, ಗ್ರಾಮ ಅಭಿಯಾನ,ಕಥಾ ರಚನೆ,ಕವಿತಾ ರಚನೆ, ಕ್ಲೇ ಮಾಡಲಿಂಗ್, ವಿಜ್ಞಾನ ಮಾದರಿ, ಫ್ಲಾಶ್ ಕಾರ್ಡುಗಳ ತಯಾರಿಯ ಬಗ್ಗೆ ತರಬೇತಿಯನ್ನು ನೀಡಲಾಗುತ್ತದೆ. ಈ ಶಿಬಿರವು ದ್ಡಾರಕಾ ಪ್ರತಿಷ್ಠಾನ(ರಿ.) ಪುತ್ತೂರು ಇದರ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಭಟ್ ಇವರ ಮಾರ್ಗದರ್ಶನದಲ್ಲಿ ನಡೆಯಿತು.