ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೆರೆಯ ಬಳಿ ನೂತನವಾಗಿ ಪುನರ್ನಿರ್ಮಾಣಗೊಂಡ ಶಿಲಾಮಯ ಕಟ್ಟೆಯ ಲೋಕಾರ್ಪಣೆ ಮತ್ತು ದಾನಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮ ದಿನಾಂಕ 20-05-2026ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಶಿಲಾಮಯ ಕಟ್ಟೆ ನಿರ್ಮಾಣಗೊಳ್ಳಲು ಧನರೂಪದಲ್ಲಿ ಸಹಕರಿಸಿದ ದ್ವಾರಕಾ ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಗೋಪಾಲಕೃಷ್ಣ ಭಟ್ಟ ಅರ್ತ್ಯಡ್ಕ ಅವರು ಶ್ರೀ ಕ್ಷೇತ್ರಕ್ಕೆ ಕಟ್ಟೆಯನ್ನು ಸಮರ್ಪಣೆ ಮಾಡಿದರು. ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಪಂಜಿಗುಡ್ಡೆ ಈಶ್ವರ ಭಟ್ಟರು ದಾನಿಗಳಿಗೆ ಶಲ್ಯವನ್ನು ಹೊದೆಸಿ ಗೌರವ ಸಮರ್ಪಿಸಿದರು. ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ವೇ. ಮೂ. ವಸಂತ ಕೆದಿಲಾಯ ದೇವರ ಪ್ರಸಾದವನ್ನು ನೀಡಿದರು. ಈ ಸಂದರ್ಭದಲ್ಲಿ ಶ್ರೀ ದೇವರಿಗೆ ಎಳ್ಳೆಣ್ಣೆ ಸಮರ್ಪಣೆ, ತುಪ್ಪದ ದೀಪದ ಸೇವೆಯನ್ನು ಶ್ರೀ ಗೋಪಾಲಕೃಷ್ಣ ಭಟ್ಟರು ನೆರವೇರಿಸಿದರು. ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಅಮೃತಕೃಷ್ಣ ಎನ್. ಸೇರಿದಂತೆ, ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಶ್ರೀಮತಿ ನಳಿನಿ ಪಿ. ಶೆಟ್ಟಿ, ಶ್ರೀ ಸುಭಾಷ್ ರೈ ಬೆಳ್ಳಿಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.