ಪಟ್ಟೆ ಬಡಗನ್ನೂರು: “ಇರುವುದೊಂದೇ ಪರಿಸರ ಈ ಪರಿಸರವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ”ಎಂದು ಶ್ರೀ ಕೃಷ್ಣ ವಿದ್ಯಾ ಸಂಸ್ಥೆಯ ಸಂಚಾಲಕರಾದ ವಿಘ್ನೇಶ್ ಹಿರಣ್ಯ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪರಿಸರ ದಿನಾಚರಣೆ ಮಹತ್ವವನ್ನು ವಿವರಿಸಿದರು. ವಿಶ್ವ ಪರಿಸರ ದಿನಾಚರಣೆ ಮಹತ್ವದ ಬಗ್ಗೆ ಪ್ರೌಢಶಾಲಾ ಮುಖ್ಯ ಗುರುಗಳಾದ ಶ್ರೀಮತಿ ಸುಮನ ಮಾತಾಜಿ ಅವರು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.ವಿದ್ಯಾರ್ಥಿಗಳಿಗೆ ಪ್ರಬಂಧ ರಚನೆ, ಮಗುವಿಗೊಂದು ಗಿಡ ಪಾಲನೆ ಹೊಣೆ,ನಮ್ಮ ಶಾಲಾ ಸಸ್ಯ ಸಂಪದ ದಾಖಲೀಕರಣ, ಔಷಧಿ ಸಸ್ಯಗಳ ಪ್ರಬಂಧ ರಚನೆ, ಪರಿಸರ ಗೀತೆ ಸಮೂಹ ಗಾಯನ, ಶಾಲಾ ತರಕಾರಿ ತೋಟದ ನಿರ್ವಹಣೆ, ಇತ್ಯಾದಿ ಕಾರ್ಯಕ್ರಮಗಳನ್ನು ಪರಿಸರ ದಿನಾಚರಣೆ ಅಂಗವಾಗಿ ನಮ್ಮ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಯಿತು. 10ನೇ ತರಗತಿ ಎಲ್ಲಾ ವಿದ್ಯಾರ್ಥಿಗಳಿಗೆ ಪರಿಸರ ದಿನಾಚರಣೆ ಪ್ರಯುಕ್ತ ಒಂದೊಂದು ಗಿಡಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪ್ರಾಥಮಿಕ ಶಾಲಾ ಮುಖ್ಯಗುರುಗಳಾದ ಶ್ರೀಮಾನ್ ರಾಜಗೋಪಾಲ.ಎನ್,ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ಪುಷ್ಪಾವತಿ ಅವರು ಉಪಸ್ಥಿತರಿದ್ದರು. ಹತ್ತನೇ ತರಗತಿಯ ವಿಸ್ಮಿತಾ ಸ್ವಾಗತಿಸಿ, 10ನೇ ತರಗತಿಯ ನಿಶಾಂತ್ ಧನ್ಯವಾದವಿತ್ತರು, 10ನೇ ತರಗತಿಯ ಯಶ್ವಿತಾ ಕಾರ್ಯಕ್ರಮ ನಿರೂಪಣೆ ಮಾಡಿದರು. ಶ್ರೀಕೃಷ್ಣ ವಿದ್ಯಾ ಸಂಸ್ಥೆಯ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು.




