ಪಟ್ಟೆ ಬಡಗನ್ನೂರು: "ಸುಮಾರು 75 ವರ್ಷಗಳ ಇತಿಹಾಸವಿರುವ ಶ್ರೀ ಕೃಷ್ಣ ವಿದ್ಯಾಸಂಸ್ಥೆಯನ್ನು ದ್ವಾರಕಾ ಪ್ರತಿಷ್ಠಾನವು ವಹಿಸಿಕೊಂಡ ನಂತರ ಈ ಪ್ರದೇಶಕ್ಕೆ ಒಂದು ಉತ್ತಮವಾದ ಶಿಕ್ಷಣ ವ್ಯವಸ್ಥೆಯನ್ನು ನೀಡುವ ಕನಸಿನೊಂದಿಗೆ, ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಬೇಕೆಂಬ ದೃಷ್ಟಿಯಿಂದ ಶಾಲೆಯ ಮೂಲಭೂತ ಸೌಕರ್ಯದೊಂದಿಗೆ ಈ ಶಾಲೆಯ ನೂತನ ಕಟ್ಟಡವನ್ನು ಉದ್ಘಾಟನೆ ಮಾಡುತ್ತಿದ್ದೇವೆ" ಎಂದು ಶ್ರೀ ಕೃಷ್ಣ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಭಟ್ ದೀಪ ಬೆಳಗಿಸಿ ಮಾತನಾಡಿದರು.
ದಿನಾಂಕ 09-07-2026ನೇ ಗುರುವಾರದಂದು ಶ್ರೀ ಮಹಾಗಣಪತಿ ಹವನದೊಂದಿಗೆ ನೂತನ ಕಟ್ಟಡ ಉದ್ಘಾಟನೆಗೊಂಡಿತು.
ಪ್ರಾಸ್ತಾವಿಕ ಮಾತುಗಳನ್ನಾಡಿದ ದ್ವಾರಕಾ ಪ್ರತಿಷ್ಠಾನದ ಕಾರ್ಯದರ್ಶಿ ಹಾಗೂ ಶ್ರೀಕೃಷ್ಣ ವಿದ್ಯಾಸಂಸ್ಥೆಗಳ ನಿರ್ದೇಶಕರಾದ ಶ್ರೀ ಗಣರಾಜ ಕುಂಬ್ಳೆ ಅವರು, " ಶಾಲೆಯ ಮೂಲಭೂತ ಸೌಕರ್ಯಗಳಲ್ಲಿ ಕಟ್ಟಡವೂ ಒಂದು. ಕಟ್ಟಡವು ಸರಿಯಾಗಿ ಇದ್ದಾಗ ಪೋಷಕರಿಗೆ ತಮ್ಮ ಮಕ್ಕಳು ಒಳ್ಳೆಯ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂಬ ವಿಶ್ವಾಸ ಇರುತ್ತದೆ. ಮಕ್ಕಳು ಭಾರತೀಯ ಸಂಸ್ಕೃತಿಯೊಂದಿಗೆ ಒಳ್ಳೆಯ ವಿದ್ಯಾಭ್ಯಾಸ ಪಡೆಯುವಂತಾಗಲಿ" ಎಂದು ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ಅಶ್ವಿನಿ ಗೋಪಾಲ ಕೃಷ್ಣ ಭಟ್, ಸಂಸ್ಥೆಗಳ ಉಪಾಧ್ಯಕ್ಷರಾದ ಶ್ರೀ ಅಮೃತಕೃಷ್ಣ, ನಿರ್ದೇಶಕರಾದ ಶ್ರೀ ಪರಮೇಶ್ವರ ಭಟ್, ಶ್ರೀ ವೆಂಕಟಕೃಷ್ಣಶರ್ಮ, ಶಾಲಾ ಸಂಚಾಲಕರಾದ ಶ್ರೀ ವಿಘ್ನೇಶ್ ಹಿರಣ್ಯ, ಪ್ರೌಢಶಾಲೆಯ SDMC ಅಧ್ಯಕ್ಷರಾದ ಶ್ರೀ ಲಿಂಗಪ್ಪ ಗೌಡ ಮೂಡಿಕೆ, ಪ್ರಾಥಮಿಕ ಶಾಲಾ SDMC ಅಧ್ಯಕ್ಷರಾದ ಶ್ರೀ ಕೇಶವ ಪ್ರಸಾದ್ ನೀಲಗಿರಿ, ಶ್ರೀ ಕೃಷ್ಣ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಸತೀಶ್ ಕೊಪ್ಪಳ, ಪ್ರತಿಭಾ ಪ್ರೌಢಶಾಲೆಯ ಮುಖ್ಯಗುರುಗಳಾದ ಶ್ರೀಮತಿ ಸುಮನಾ ಬಿ., ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಶ್ರೀ ರಾಜಗೋಪಾಲ್ ಎನ್., ಶ್ರೀ ಕೃಷ್ಣ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಗುರುಗಳಾದ ಶ್ರೀಮತಿ ಪುಷ್ಪಾವತಿ ಡಿ. ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯಗುರುಗಳಾದ ಶ್ರೀಮತಿ ಸುಮನಾ ಬಿ.ಯವರು ಸ್ವಾಗತಿಸಿ, ಪ್ರಾಥಮಿಕ ಶಾಲಾ ಮುಖ್ಯಗುರುಗಳಾದ ಶ್ರೀ ರಾಜ ಗೋಪಾಲ್ ಎನ್. ಧನ್ಯವಾದಗಳನ್ನು ನೀಡಿದರು. ಆಂಗ್ಲ ಮಾಧ್ಯಮ ವಿಭಾಗದ ಮಾತಾಜಿ ಶ್ರೀಮತಿ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು.
ಈ ಕಾರ್ಯಕ್ರಮದಲ್ಲಿ ಊರಿನ ಗಣ್ಯ ವ್ಯಕ್ತಿಗಳು ಹಾಗೂ ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದರು.


