ದ್ವಾರಕಾ ಪ್ರತಿಷ್ಠಾನ(ರಿ.) ಪುತ್ತೂರು ಇದರ ವತಿಯಿಂದ ದಿನಾಂಕ 25-4-2026ರಂದು ಶಂಕರ ಜಯಂತಿ ಆಚರಣೆ ಮುಕ್ರಂಪಾಡಿಯ ಗೋಕುಲ ಬಡಾವಣೆಯ ನಂದಗೋಕುಲ ವೇದಿಕೆಯಲ್ಲಿ ನೆರವೇರಿತು.
ಕಾರ್ಯಕ್ರಮವನ್ನು ದ್ವಾರಕಾ ಪ್ರತಿಷ್ಠಾನದ ಉಪಾಧ್ಯಕ್ಷರಾದ ಶ್ರೀಮತಿ ಅಶ್ವಿನಿ ಗೋಪಾಲಕೃಷ್ಣ ಭಟ್ ಅರ್ತ್ಯಡ್ಕ ಅವರು ದೀಪ ಬೆಳಗುವುದರೊಂದಿಗೆ ಉದ್ಘಾಟಿಸಿದರು. ನೆರೆದ ಸರ್ವರನ್ನು ಹಾಗೂ ಗಣ್ಯರನ್ನು ವೇದ ಶಿಬಿರದ ಶಿಬಿರಾರ್ಥಿ ಶ್ರೀ ಶಿವಪ್ರಸಾದ್ ಭಟ್ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಿರಿಯ ಸಾಹಿತಿಗಳು ಹಾಗೂ ದ್ವಾರಕಾ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಶ್ರೀ ಗಣರಾಜ ಕುಂಬ್ಳೆ ಅವರು ಶಂಕರಾಚಾರ್ಯರ ಕುರಿತಾಗಿ ಮಾತನಾಡಿ ” ಸಣ್ಣ ಪ್ರಾಯದಲ್ಲೇ ಮನಸನ್ನು ಏಕಾಗ್ರತೆಗೆ ತರುವುದನ್ನು ಕಲಿತಾಗ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಶಂಕರಾಚಾರ್ಯರು ಉತ್ತಮ ಉದಾಹರಣೆ. ಸನಾತನ ಧರ್ಮದ ಶ್ರೇಷ್ಠ ಗ್ರಂಥಗಳಿಗೆ ಭಾಷ್ಯ ಬರೆಯುವಂತೆ ಬೆಳೆದವರು ಅವರು. ಪಂಚಾಯತನ ದೇವರ ಪೂಜಾ ಪದ್ಧತಿಯನ್ನು ಪ್ರಾರಂಭಿಸಲು ಕಾರಣೀಕರ್ತರಾಗಿ ಆರಾಧನೆಯ ವಿಷಯದಲ್ಲಿ ಎಲ್ಲರನ್ನೂ ಒಗ್ಗೂಡಿಸಿದವರು ಶಂಕರ ಭಗವತ್ಪಾದರು. ಗುರುಮುಖೇನ ಕಲಿತದ್ದನ್ನು ಪಾಲಿಸಿದರೆ, ಶೀಘ್ರವಾಗಿ ಕಲಿಯುವುದನ್ನು ಅಭ್ಯಾಸ ಮಾಡಿಕೊಂಡರೆ ಆಗ ನಮಗೂ ಯಶಸ್ಸು ಲಭಿಸುತ್ತದೆ” ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇದ ಶಿಬಿರದ ಶಿಬಿರಾರ್ಥಿ ಶ್ರೀ ಸುಶಾಂತ್.ಪಿ ಅವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಹಿತೈಷಿ, ಬಂಧುಗಳು, ಗುರುವೃಂದ, ಸಂಯೋಜಕರು ಉಪಸ್ಥಿತರಿದ್ದರು. ವಿದ್ಯಾರ್ಥಿ ಶ್ರೀ ಚಿರಂತನ ರಾಮ ಪ್ರಾರ್ಥಿಸಿದರು. ಶ್ರೀ ಪ್ರಣವ ಕೆ.ಎನ್ ಧನ್ಯವಾದ ಸಮರ್ಪಿಸಿದರು. ಶ್ರೀನಿಧಿ ಭಟ್ ನಿರೂಪಿಸಿದರು.