ಪಟ್ಟೆ ಬಡಗನ್ನೂರು : “ಮನುಷ್ಯ ತಾನು ಅಭಿವೃದ್ಧಿ ಆಗಬೇಕಾದರೆ ಹೊಸ ರೀತಿಯಲ್ಲಿ ಯೋಚಿಸಬೇಕು. ಹಿರಿಯರು ಹಾಕಿದ ಪಂಕ್ತಿಯನ್ನು ಅನುಸರಿಸಬೇಕು. ಸಾಹಿತ್ಯ ರಚನೆಯಿಂದ ಒಬ್ಬ ವ್ಯಕ್ತಿ ಹೆಸರು ಮಾಡಿದಾಗ ಆ ಊರಿಗೆ, ಆತನಿರುವ ಸಂಸ್ಥೆಗೆ ಹೆಸರು ಬರುತ್ತದೆ “ಎಂದು ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಭಟ್ಟರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ದಿನಾಂಕ 12.07.2026ನೇ ಭಾನುವಾರದಂದು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಪುತ್ತೂರು ತಾಲೂಕು ಸಮಿತಿ ಮತ್ತು ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆ ಜಂಟಿಯಾಗಿ ವಿದ್ಯಾರ್ಥಿಗಳಿಗಾಗಿ ನಡೆಸಿದ ‘ಕಥೆ-ಕವಿತೆ ರಚನೆಯ ಕಮ್ಮಟ’ವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ‘ದ್ವಾರಕಾ ಪ್ರತಿಷ್ಠಾನದ ಕಾರ್ಯದರ್ಶಿ’ ಹಾಗೂ ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳ ನಿರ್ದೇಶಕರಾದ ಶ್ರೀಗಣರಾಜ ಕುಂಬ್ಳೆ ಅವರು “ಮಕ್ಕಳಲ್ಲಿ ಸದಾ ಹೊಸತು ಬಯಸುವ ಜಾಯಮಾನ ಇದೆ. ಹೊಸ ಹೊಸ ರೀತಿಯಲ್ಲಿ ಯೋಚನೆ, ಮಾತು, ವಿನ್ಯಾಸಗಳಲ್ಲಿ ಬೆಳೆಯಬೇಕೆಂಬ ಉದ್ದೇಶದಿಂದ ಇಂತಹ ಕಮ್ಮಟವನ್ನು ಏರ್ಪಡಿಸಲಾಗಿದೆ. ಇದರ ಸದುಪಯೋಗವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆದು ಕೊಳ್ಳಬೇಕಾಗಿ ಕರೆ ನೀಡಿದರು.
ವಿವಿಧ ಶಾಲೆಗಳಿಂದ ಸುಮಾರು 50 ವಿದ್ಯಾರ್ಥಿಗಳು ಕಮ್ಮಟದಲ್ಲಿ ಭಾಗವಹಿಸಿ ಇದರ ಪ್ರಯೋಜನವನ್ನು ಪಡೆದರು. ಮುಖ್ಯ ಅತಿಥಿಗಳಾಗಿ ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಸಂಚಾಲಕರಾದ ಶ್ರೀ ವಿಘ್ನೇಶ್ ಹಿರಣ್ಯ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಗಣರಾಜ ಕುಂಬ್ಳೆ, ಶ್ರೀ ರಾಜಗೋಪಾಲ್ ಭಟ್ ಪಟ್ಟೆ, ಶ್ರೀ ನವೀನಕೃಷ್ಣ ಎಸ್. ಉಪ್ಪಿನಂಗಡಿ, ಶ್ರೀಶ ವಾಸವಿ ತುಳುನಾಡು ಇವರು ವಿದ್ಯಾರ್ಥಿಗಳಿಗೆ ಕಥೆ- ಕವಿತೆ ರಚನೆಯ ಬಗ್ಗೆ ತರಬೇತಿಯನ್ನು ನೀಡಿದರು.
ಪ್ರೌಢಶಾಲಾ ಮುಖ್ಯಗುರು ಗಳಾದ ಶ್ರೀಮತಿ ಸುಮನಾ ಬಿ.ಯವರು ಸ್ವಾಗತಿಸಿ, ಪ್ರಾಥಮಿಕ ಶಾಲಾ ಶಿಕ್ಷಕಿಯಾದ ಶ್ರೀಮತಿ ಚಿತ್ರಾ ಮಾತಾಜಿಯವರು ಧನ್ಯವಾದಗಳನ್ನು ನೀಡಿದರು. ಆಂಗ್ಲ ಮಾಧ್ಯಮ ವಿಭಾಗದ ನವ್ಯಶ್ರೀ ಮಾತಾಜಿ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳ ಬೋಧಕ ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದರು.